ದೀಕ್ಷಿತ್ ಶೆಟ್ಟಿಯ``ಬ್ಲಿಂಕ್`` ಗೆ 25 ದಿನದ ಸಂಭ್ರಮ
Posted date: 07 Sun, Apr 2024 11:55:45 AM
ಕನ್ನಡ ಚಿತ್ರರಂಗದ ಪರಿಸ್ಥಿತಿ ಬದಲಾಗಿದೆ. ಸಿನಿಮಾ ಮಾಡುವುದಕ್ಕಿಂತ ಜನರಿಗೆ ತಲುಪಿಸುವುದೇ ದೊಡ್ಡ ಸವಾಲಾಗಿದೆ. ಯಾಕಂದರೆ ಜನ ಥಿಯೇಟರ್ ನತ್ತ ಸುಳಿಯುತ್ತಿಲ್ಲ. ಈ ನಗ್ನಸತ್ಯದ ನಡುವೆಯೇ ಕನ್ನಡ ಚಿತ್ರವೊಂದು 25 ದಿನ ಪೂರೈಸಿದೆ. ಆ ಕೀರ್ತಿಗೆ ಭಜನವಾಗಿರುವುದು ಬ್ಲಿಂಕ್ ಸಿನಿಮಾ.
 
ಸ್ಟಾರ್ ಹೀರೋ ಸಿನಿಮಾಗಳ ಅಬ್ಬರದ ನಡುವೆಯೇ ಮಾರ್ಚ್ 8ರಂದು ತೆರೆಗೆ ಬಂದ ಬ್ಲಿಂಕ್ ಸಿನಿಮಾಗೀಗ 25ರ ಸಂಭ್ರಮ. ಈ ಕ್ಷಣಗಳನ್ನು ಮಾಧ್ಯಮದರೊಟ್ಟಿಗೆ ಚಿತ್ರತಂಡ ಹಂಚಿಕೊಂಡಿದೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ರೇಣುಕಾಂಬ ಸ್ಟುಡಿಯೋದಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಈ ವೇಳೆ ಚಿತ್ರತಂಡ ಬ್ಲಿಂಕ್ ಪಯಣದ ಬಗ್ಗೆ ಅನುಭವ ಹಂಚಿಕೊಂಡಿದೆ.   
 
ನಟ ದೀಕ್ಷಿತ್ ಶೆಟ್ಟಿ ಮಾತನಾಡಿ, ಬಹಳಷ್ಟು ಕನಸುಗಳನ್ನು ಇಟ್ಟುಕೊಂಡು ಮಾಡಿದ ಪ್ರಾಜೆಕ್ಟ್. ಮುಖ್ಯವಾಗಿ ಕೋರ್ ಟೀಂ ಥಿಯೇಟರ್ ಹಿನ್ನೆಲೆಯಿಂದ ಬಂದಿರುವಂತಹದ್ದು. ಸಿನಿಮಾ ಮಾಡುವಾಗ ಸಾಕಷ್ಟು ಸಂದೇಹ ಇತ್ತು. ಜನ ಈ ರೀತಿ ವಿಷಯವನ್ನು ರಿಸೀವ್ ಮಾಡ್ತಾರಾ ಎಂದು‌‌. ನಾವು ಸಿನಿಮಾ ಮುಗಿಸಿಕೊಂಡುವ ಎಲ್ಲೇ ಹೋದರು, ಡಿಸ್ಟ್ರಿಬ್ಯೂಷನ್ ಕಂಪನಿಗೆ ಹೋದರೂ ಪ್ರೆಸೆಂಟ್ ಮಾಡುತ್ತೀರಾ ಎಂದು ಕೇಳಿದಾಗ ಹಿಂದೇಟು ಹಾಕಿದರು. ಆಗುತ್ತಾ ಇದು ಎಂದು.‌ ಆದರೆ ಸಿನಿಮಾ 25 ದಿನ ಪೂರೈಸಿದೆ. ಈ ಚಿತ್ರವನ್ನು ಅಪ್ಪಿ ಒಪ್ಪಿದ್ದಾರೆ. ಹೀಗಾಗಿ ಈ ರೀತಿ ಹೊಸ ಸಿನಿಮಾಗಳು ಬರುವುದು ಮುಖ್ಯ. 25 ದಿನ ಬ್ಲಿಂಕ್ ಕಂಪ್ಲೀಟ್ ಆಗಿರುವುದು ಖುಷಿ ಇದೆ. ಆದರೆ 25 ದಿನ ಅಷ್ಟೇ ಓಡುವಂತಹ ಸಿನಿಮಾವಲ್ಲ. ಬ್ಲಿಂಕ್ ನನ್ನ ಪ್ರಕಾರ ಇನ್ನೂ ಹೆಚ್ಚಿನ ಜನಕ್ಕೆ ಸೇರುವ ಸಿನಿಮಾ. ಮುಂದಿನ ದಿನಗಳಲ್ಲಿ ಯಾವುದೇ ಒಂದು ಸೈನ್ಸ್ ಫಿಕ್ಷನ್ ಸಿನಿಮಾ ಆಗಬೇಕು ಎಂದರೆ ಇದು ಮಾದರಿಯಾಗುತ್ತದೆ ಎಂದರು.

ನಟಿ ಚೈತ್ರಾ ಆಚಾರ್ ಮಾತನಾಡಿ, ಬ್ಲಿಂಕ್ ನನ್ನ ಪಾಲಿಗೆ ಲಕ್ಕಿ ಸಿನಿಮಾ. ಈ ಚಿತ್ರದ ಶೂಟ್ ಮಾಡುವಾಗಲೇ ಸಪ್ತ ಸಾಗರದಾಚೆ ಎಲ್ಲೋ ತಂಡದಿಂದ ಕಾಲ್ ಬಂದಿದ್ದು. ಹೀಗಾಗಿ ಈ ಚಿತ್ರ ತುಂಬಾ ಲಕ್ಕಿ ನನಗೆ. ಈ ಕಥೆ ಹೇಳಲು ಬಂದಾಗ ಶ್ರೀನಿಧಿ ಬೆಂಗಳೂರು ಎಷ್ಟು ಕ್ಲಾರಿಟಿಯಾಗಿ ಕಥೆ ಹೇಳಿದರು. ಅವರು ಮಾಡಿದ ಒಂದು ಶಾರ್ಟ್ ಫಿಲ್ಮಂ ತೋರಿಸಿದರು. ಬಳಿಕ ನಾನು ಒಪ್ಪಿಕೊಂಡೆ. ನಾನು ಈ ಸಿನಿಮಾದ ಭಾಗವಾಗಿರುವುದು ಖುಷಿ ಕೊಟ್ಟಿದೆ. ಈ ಚಿತ್ರ ಜನಕ್ಕೂ ತಲುಪಿದೆ. ನಿರ್ಮಾಪಕರು ಈ ಸಿನಿಮಾಗೆ ದುಡ್ಡು ಹಾಕಿ ಸುಮ್ಮನಾಗದೇ ಫೀಲ್ಡ್ ಗೆ ಇಳಿದು, ಅವರೇ ಡಿಸ್ಟ್ರಿಬ್ಯೂಷನ್ ತೆಗೆದುಕೊಂಡು ಥಿಯೇಟರ್ ನವರು ಕೊಡುವ ಶೋ ತೆಗೆದುಕೊಂಡು, ಆ ಶೋ ಹೌಸ್ ಫುಲ್ ಆದವು. ಇದು ಕಂಟೆಂಟ್ ಗೆದ್ದಿರುವ ಪವರ್ ಎನ್ನಬಹುದು ಎಂದರು.
 
ನಿರ್ದೇಶಕ ಶ್ರೀನಿಧಿ ಬೆಂಗಳೂರು ಮಾತನಾಡಿ, ಚಲನಚಿತ್ರರಂಗಕ್ಕೆ ನಾನು ಹೊಸಬ. ಬೆರಗು ಕಣ್ಣಿನಿಂದ ನಾನು ಈ ಕಲಾ ಪ್ರಪಂಚವನ್ನು ನೋಡುತ್ತಿದ್ದೇನೆ. ಮೊಲದ ಚಿತ್ರವನ್ನು ನಾವು ಪ್ರಾರಂಭ ಮಾಡಿದಾಗ ನನಗೆ ಇಷ್ಟು ನಂಬಿಕೆ ಇರಲಿಲ್ಲ. ಈ ಚಿತ್ರ ಇಷ್ಟು ವಿಸ್ತಾರವಾಗಿ ಪ್ರೇಕ್ಷಕರಿಗೆ ತಲುಪುತ್ತದೆ ಎಂದುಕೊಂಡಿರಲಿಲ್ಲ. ಚಿತ್ರ 25 ದಿನ ಪೂರೈಸಿ 50 ದಿನತ್ತ ದಾಪುಗಾಲು ಇಡುತ್ತಿದೆ. ಇದಕ್ಕೆಲ್ಲಾ ಮುಖ್ಯ ಕಾರಣ ಪ್ರೇಕ್ಷಕರು ಹಾಗೂ ಮಾಧ್ಯಮಗಳು. ಹೊಸಬರ ಕನಸಿಗೆ ಬೆನ್ನುತಟ್ಟಿದ ಪ್ರತಿಯೊಬ್ಬರಿಗೆ ಧನ್ಯವಾದ ಎಂದು ಸಂತಸ ಹಂಚಿಕೊಂಡರು. 
 
ರವಿಚಂದ್ರ ಎಜೆ, ಮೂಲತಃ ಗುಲ್ಬರ್ಗದವರು.‌‌ ಸಿನಿಮಾ ಶೂಟಿಂಗ್ ಗೂ‌ ಮೊದ್ಲೇ ಸಪರೇಟ್ ಆಗಿ ಟೀಸರ್ ಶೂಟ್ ಮಾಡಿದ್ದೇವು. ಟೀಸರ್ ಶೂಟ್ ಮಾಡುವ ಮೊದಲು   ಮೇನ್ ಸ್ಟ್ರೀಮ್ ನಟ ನಟಿಯರು ನಮ್ಮ ಸಿನಿಮಾದಲ್ಲಿ ಕೆಲಸ ಮಾಡ್ತಾರಾ ಎಂದು ಚರ್ಚೆ ಮಾಡಿದೆವು. ಆದಾಗಲೇ ನಿಧಿ ದೀಕ್ಷಿತ್ ಸರ್ ಗೆ ಕಥೆ ಹೇಳಿದ್ದರು. ಸರ್ ಗೆ ಕಥೆ ಇಷ್ಟವಾಯ್ತು. ಹೀಗೆ ಜರ್ನಿ ಶುರುವಾಯ್ತು. ಆ ಜರ್ನಿಗೆ ಇಲ್ಲಿಗೆ ಬಂದು ತಲುಪಿದೆ. ಖುಷಿ ಇದೆ. 25 ದಿನ ಸಿನಿಮಾ ಪೂರೈಸಿರುವುದು. ಬ್ಲಿಂಕ್ ಸಿನಿಮಾ ಕೈ ಹಿಡಿದ ಎಲ್ಲಾ ಪ್ರೇಕ್ಷಕರಿಗೆ ಧನ್ಯವಾದ ಎಂದರು. 
 
"ಬ್ಲಿಂಕ್" ಸಿನಿಮಾಕ್ಕೆ ಚಿತ್ರರಂಗದ ಕೆಲವು ಪ್ರಮುಖ ನಟ, ನಟಿಯರು ಸಹ ಬೆಂಬಲ ವ್ಯಕ್ತಪಡಿಸಿದರು. ಸಿನಿಮಾಗೆ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆ, ಸಿನಿಮಾದ ಬಗ್ಗೆ ಕೇಳಿ ಬಂದ ಉತ್ತಮ ವಿಮರ್ಶೆಗಳನ್ನು ಗಮನಿಸಿ ಸ್ವತಃ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ‘ಬ್ಲಿಂಕ್’ ಸಿನಿಮಾ ನೋಡುವ ಇಂಗಿತ ವ್ಯಕ್ತಪಡಿಸಿದ್ದರು. ಇನ್ನುಳಿದಂತೆ ಸಿಂಪಲ್ ಸುನಿ, ನವೀನ್ ಶಂಕರ್, ರುಕ್ಮಿಣಿ ವಸಂತ್ ಹಾಗೂ ನಟಿ ಬೃಂದಾ ಆಚಾರ್ ಸೇರಿದಂತೆ ಹಲವಾರು ಕನ್ನಡ ತಾರೆಯರು "ಬ್ಲಿಂಕ್"ಗೆ ಬಹುಪರಾಕ್ ಎಂದಿದ್ದರು.
 
ಶ್ರೀನಿಧಿ ಬೆಂಗಳೂರು ನಿರ್ದೇಶನದ "ಬ್ಲಿಂಕ್"ಚಿತ್ರಕ್ಕೆ ರವಿಚಂದ್ರ ಎ. ಜೆ ಬಂಡವಾಳ ಹೂಡಿದ್ದಾರೆ. "ದಿಯಾ" ಖ್ಯಾತಿಕ ದೀಕ್ಷಿತ್ ಶೆಟ್ಟಿ, ಚೈತ್ರಾ ಆಚಾರ್, ಗೋಪಾಲ ದೇಶಪಾಂಡೆ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಈ ಸಿನಿಮಾ ಭಿನ್ನವಾದ ಕತೆ ಹೊಂದಿದೆ. ಟೈಮ್ ಲೂಪ್, ಟೈಮ್ ಟ್ರಾವೆಲ್ ಕಾನ್ಸೆಪ್ಟ್ ಹೊಂದಿರುವ ಸಿನಿಮಾ ಇದಾಗಿದೆ. ಬ್ಲಿಂಕ್ ಸಿನಿಮಾ ವಿದೇಶದಲ್ಲಿಯೂ ತೆರೆಕಂಡಿದೆ. ಆಸ್ಟ್ರೇಲಿಯಾ, ಯುಎಸ್ ಎ, ಯುಕೆ  ಐರ್ಲ್ಯಾಂಡ್ ನಲ್ಲಿ ಸಖತ್ ರೆಸ್ಪಾನ್ಸ್ ಸಿಕ್ಕಿದೆ.  ಕೆನಡಾ, ಜರ್ಮನಿ ಹಾಗೂ ಮಲೇಷ್ಯಾದಲ್ಲಿಯೂ ಬಿಡುಗಡೆಯಾಗಿದ್ದು, ಇದೀಗ 25 ದಿನ ಪೂರೈಸಿ 50 ದಿನದತ್ತ ಹೆಜ್ಜೆ ಇಟ್ಟಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed